Showing posts with label ನನ್ನ ಜೀವನ ಚಿತ್ರಗಳು. Show all posts
Showing posts with label ನನ್ನ ಜೀವನ ಚಿತ್ರಗಳು. Show all posts

Friday, November 19, 2010

ಚೆನ್ನಗಿರಿ ತಾತ ಪಾಪಯ್ಯನವರ ಚತ್ರದಲ್ಲಿ....

ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಶ್ರೀ ರಾಮೇಶ್ವರ ಸುಬ್ರಮಣ್ಯ ದೇವಾಲಯ,ಭದ್ರಾವತಿ
ನಾನು ಪ್ರೈಮರಿ ಶಾಲೆಯಲ್ಲಿದ್ದಾಗ ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಸುಬ್ರಮಣ್ಯ ದೇವಾಲಯ ಮತ್ತು ಶ್ರೀ ರಾಘವೇಂದ್ರಸ್ವಾಮಿಗಳ ಮಠ ಇವುಗಳ ಪರಿಸರದಲ್ಲೇ ಗೋಲಿ ಆಡಿಕೊಂಡು ಬೆಳೆದ ಆ ದಿನಗಳನ್ನು ಮರೆಯಲಾರೆ. ಇದು ಬಹುತೇಕ ಬ್ರಾಹ್ಮಣ ವರ್ಗದವರಿದ್ದ ಸ್ಥಳ. ಈ ದೇವಾಲಯ ಮತ್ತು ಮಠದ ಎಡ ಮಗ್ಗುಲಿನ ಎದುರಿಗಿನ ಮುಖ್ಯವಾದ ರಸ್ತೆಯು ತರೀಕೆರೆ ರಸ್ತೆಯ ಕಡೆಗೆ ಹೋಗುತ್ತದೆ.
ಅಂದಿನ ಕಾಲಕ್ಕೆ ಅಂದರೆ,1960ರ ದಶಕದಲ್ಲಿ ಇಲ್ಲಿದ್ದ ಚೆನ್ನಗಿರಿ ಶ್ರೀ ಪಾಪಯ್ಯನವರ ದೊಡ್ಡ ಚತ್ರದ ವಠಾರದಲ್ಲಿದ್ದೆವು. ಅದೇ ಚತ್ರದಲ್ಲಿ ಅದೇ ತರೀಕೆರೆ ರಸ್ತೆಯ ಎದುರಿಗೇ ಇತ್ತು ನಮ್ಮ ಮನೆ; ನನ್ನ ಬಾಲ್ಯಾರಂಭ ಕಾಲದಲ್ಲಿದ್ದ ಮನೆ, ನಮ್ಮ ತಾತನ ಮನೆ.
ಶ್ರೀ ರಾಮೇಶ್ವರ ಸುಬ್ರಮಣ್ಯ ದೇವಸ್ಥಾನದ ಬಲಕ್ಕಿರುವ ಭದ್ರಾನದಿಯ ದಂಡೆಯಿಂದ..
ಯಾಕೆಂದರೆ, ಪಾಪಯ್ಯನವರು ಬೇರೆ ಯಾರೂ ಅಲ್ಲ; ನನ್ನ ತಾಯಿಯ ತಂದೆಯೆ.  ಅಂದಿನ ಕಾಲಕ್ಕೆ ಚೆನ್ನಗಿರಿಯಲ್ಲಿ ದೊಡ್ಡ ಶ್ರೀಮಂತರಾದ ಆ ತಾತನವರನ್ನು ನಾನು ನೋಡಲೇ ಇಲ್ಲವೆನ್ನಿ. ಅಷ್ಟೇ ಅಲ್ಲ, ತಾತ ಎಂದೋ ತೀರಿಕೊಂಡಿದ್ದರಲ್ಲ;  ಆ ಚತ್ರದ ಒಡೆತನವೆಲ್ಲ ನಮ್ಮ ಸೋದರ ಮಾವಂದಿರು ಮತ್ತು ನನ್ನ ತಾತ ಪಾಪಯ್ಯನವರ ರೈಸ್ ಮಿಲ್ ನಲ್ಲಿ ಲೆಕ್ಕ ಬರೆಯುತ್ತಲಿದ್ದ ಹಾಗೂ ತಾವೂ ಅವರ ವ್ಯವಹಾರದ ಪಾಲುದಾರರೆಂದು ಹೇಳಿಕೊಳ್ಳುತ್ತಿದ್ದ ಕೃಷ್ಣಾಜಿ ರಾಯರ ಮಕ್ಕಳ ಕೈಯಲ್ಲೇ ಇತ್ತು. ಬಡ ಮಾಸ್ತರಾದ ನಮ್ಮ ತಂದೆಯವರು ಅಲ್ಲೇ ನನ್ನ ಸೋದರ ಮಾವಂದಿರ ಪಾಲಿಗೆ ಬಂದ ಕೆಲವಾರು ಮನೆಗಳಲ್ಲೊಂದಾದ ಒಂದು ಅಂಕಣದ ಮನೆಯಲ್ಲಿ ವಾಸವಾಗಿದ್ದರಷ್ಟೇ. ಆನಂತರ, ನಮ್ಮ ಸೋದರ ಮಾವಂದಿರು ಅವರ ಕುಟುಂಬದ ಕಾರಣಕ್ಕಾಗಿ  ತಮ್ಮ ಭಾಗದ ಚತ್ರವನ್ನೇ ಮಾರಿಬಿಟ್ಟರು.ಬಳಿಕ ಉಳಿದ ಭಾಗವನ್ನೂ ಕೃಷ್ಣಾಜಿರಾಯರ ಮಕ್ಕಳೂ ಮಾರಿಕೊಂಡರು.
ಈಗ ಆ ಚತ್ರದ ಮನೆಗಳೆಲ್ಲಿ..? ಆ ಜಾಗದ ಹಳೆಯ ಕುರುಹೂ ಕೂಡ ಸಿಗುವುದು ಕಷ್ಟವೇ.... ಆ ಚತ್ರವೆಲ್ಲವೂ ಡಿಮಾಲಿಷ್ ಆಗಿದೆ. ಜಾಗವೂ ಸಹ ಚಿಂದಿ ಚಿತ್ರಾನ್ನವಾಗಿ ಯಾರ್ಯಾರಿಗೋ ಹಂಚಿ ಹೋಗಿ ಬಿಟ್ಟಿದೆ!. ಅಲ್ಲಲ್ಲಿ ಮನೆಗಳೂ ತಲೆ ಎತ್ತಿವೆ.
ಇದನ್ನೆಲ್ಲ ಯಾಕೆ ಹೇಳಬೇಕೆನಿಸಿತೆಂದರೆ, ನಮ್ಮದೇ ಎನ್ನಬಹುದಾದ ನಮ್ಮ ತಾತನ ಮನೆಯಲ್ಲಿದ್ದವರು ನಾವು, ಅದರ ಕುರುಹೋ ಒಂಚೂರು ಉಳಿದಿಲ್ಲ! ಆ ಬಳಿಕ ಮೇಲೆ ಹೇಳಿದಂತೆ ನಾವು ವಾಸವಾಗಿದ್ದ ಉಪ್ಪಾರ ಬೀದಿಯಲ್ಲಿದ್ದ ಮತ್ತು ಹಳದಮ್ಮನ ಕೇರಿಯಲ್ಲಿದ್ದ ಎರಡೂ ಮನೆಗಳು ಇಂದಿಗೂ ಹಾಗೇ ಇರುವುದು ಈ ನಮ್ಮ ಬದುಕಿನ ವಿಪರ್ಯಾಸವಲ್ಲವೇ ಅನ್ನಿಸಿಬಿಟ್ಟಿತ್ತು.


Thursday, November 18, 2010

ನಾನು ಪ್ರೌಢ ಶಾಲೆಯಲ್ಲಿದ್ದಾಗಿನ ವಾಸದ ಮನೆ

ಹಳದಮ್ಮ ದೇವಸ್ಥಾನ, ಹಳೇನಗರ, ಭದ್ರಾವತಿ
ನಾನು ಪ್ರೌಢಶಾಲೆಯಲ್ಲಿ ಎಸ್ಸೆಸ್ಸ್ ಲ್ ಸಿ ಓದುತ್ತಿದ್ದಾಗ ನಾವು ವಾಸವಾಗಿದ್ದ ಜೋಡಿ ಮನೆ ಭದ್ರಾವತಿಯ ಹಳೇನಗರದ ಹಳದಮ್ಮ ದೇವಸ್ಥಾನದ ಆವರಣದ ಮುಂಭಾಗದ ವಿಶಾಲವಾದ ರಸ್ತೆಯ ಎಡ ಮಗ್ಗುಲಿನ ಆರಂಭಕ್ಕೇ ಇದೆ.  ಇದೂ ಕೂಡ ಮುಂಭಾಗದ ಜಗುಲಿಯನ್ನು ಹೊರತುಪಡಿಸಿದರೆ ಇಂದಿಗೂ ಅದೇ ಸ್ಥಿತಿಯಲ್ಲಿರುವುದು ಅನಿರೀಕ್ಷಿತವೇ ಆಗಿತ್ತು! ಮೋಟಾರು ಬೈಕ್ ನಿಂತಿರುವ ಎಡಭಾಗದ ಮನೆ. ನನ್ನ ವಿದ್ಯಾಭ್ಯಾಸಕ್ಕೊಂದು ವಿಶಿಷ್ಟ ತಿರುವು ನೀಡಿದ ಮನೆಯಿದು. ಎಸ್ಸೆಸ್ಸೆ ಲ್ ಸಿಯಲ್ಲಿ ಪ್ರಥಮ ದರ್ಜೆಯಲ್ಲಿ (75% ಅಂಕಗಳಲ್ಲಿ) ತೇರ್ಗಡೆಯಾದೆ.  ಇಲ್ಲಿ ಮಾಯಾಲಾಂದ್ರದ ಮಾದರಿಯಲ್ಲಿ ಹೋಂ ಸಿನಿಮಾ ಪ್ರೋಜೆಕ್ಷರ್ ಸ್ವತಃ ತಯಾರಿಸಿ, ಈ ಮನೆಯ ಮಹಡಿಯ ಮೇಲೆ ಮೂಕಿ ಸಿನಿಮಾ ನನ್ನ ತಮ್ಮಂದಿರಿಗೆ ಸ್ನೇಹಿತರಿಗೆ ಪ್ರದರ್ಶಿಸುತ್ತಿದ್ದೆ.  ಹುಡುಗ ಪ್ರತಿಭಾವಂತ ಹಾಗೂ ತಾಂತ್ರಿಕ ತಲೆಗಾರನೆಂದು ಕರೆಸಿಕೊಳ್ಳುತ್ತಿದ್ದ ದಿನಗಳವು.
ಇಲ್ಲಿ ನಡೆಯುವ ಹಳದಮ್ಮ ದೇವಸ್ಥಾನದ ಜಾತ್ರೆ ತುಂಬ ಪ್ರಸಿದ್ದಿ ಪಡೆದಿದೆ.ಈ ದೇವಸ್ಥಾನದ ಮುಂಭಾಗದ ವಿಶಾಲವಾದ ಆವರಣದಲ್ಲಿ, ಹರಕೆ ಹೊತ್ತವರು  ವಿಶಿಷ್ಟರೀತಿಯಲ್ಲಿ ಸಿಡೆಯಾಡಿ ಸೇವೆ ಸಲ್ಲಿಸುವ ಕಂಭವಿದು. ಅಂದರೆ, ಅದೇನು ಸಾಮಾನ್ಯ ಹರಕೆಯಲ್ಲ; ಅದನ್ನು ಜೀವದ ಹಂಗು ತೊರೆದು ಹಳದಮ್ಮ ದೇವಿಗೆ ದೃಢ ನಂಬಿಕೆ ನಿಷ್ಠೆಯಿಂದ ನಡೆದುಕೊಂಡು ಸಲ್ಲಿಸುವಂಥ ಅತಿಕ್ಲಿಷ್ಟಕರ ಸೇವೆಯೇ ಸರಿ. ಹರಕೆ ಹೊತ್ತಾತನ ಬೆನ್ನಿನ ಚರ್ಮಕ್ಕೆ ಕಬ್ಬಿಣದ ಕೊಕ್ಕೆ ಹಾಕಿ (ರಕ್ತ ಬರುವುದಿಲ್ಲ), ಆತನನ್ನು ಸಿಡೆ ಕಂಭದ ಮೇಲಿನ ತಿರುಗುಣಿ ಕೋಲಿನ ತುತ್ತ ತುದಿಗೆ ಕಟ್ಟಿ ಮೇಲೆತ್ತಿ ಹರಕೆ ಹೊತ್ತಂತೆ ಮೂರು ಸುತ್ತು ಅಥವಾ ಐದು ಸುತ್ತು ಹೀಗೆ ತಿರುಗಿಸುತ್ತಾರೆ. ನೋಡಲು ಸಾವಿರಾರು ಜನ ಇಲ್ಲಿ ನೆರೆದಿರುತ್ತಾರೆ. ಇಂದಿಗೂ ಈ ಜಾತ್ರೆ ಅಷ್ಟೇ ವೈಭವದಿಂದ ನಡೆಯುತ್ತದೆ.
ಭದ್ರಾವತಿ ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ನೋಟ

ನನ್ನ ಬಾಲ್ಯದ ಮಿತ್ರ ಈಗ ಪ್ರಧಾನ ಅರ್ಚಕರೂ ಆದ ಶ್ರೀ ರಂಗನಾಥ ಅವರೊಂದಿಗೆ
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಹೊರನೋಟ
ಭದ್ರಾವತಿ ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ
ದೇವಾಲಯ ತುಂಬ ಪ್ರಸಿದ್ದಿ ಪಡೆದಿದೆ.ಹಳೇ ಬೀಡು  ಬೇಲೂರು ಮಾದರಿಯ ಶಿಲ್ಪಕಲೆಯನ್ನು ಹೊಂದಿರುವ ಈ ದೇವಸ್ಥಾನದ ಸುತ್ತ ಮುತ್ತ ಹಾಗೂ ಪ್ರಾಂಗಣದಲ್ಲಿ  ನನ್ನ ಬಾಲ್ಯದ ಮಿತ್ರರೊಂದಿಗೆ ಆಡಿ ಬೆಳೆದ ಆ ದಿನಗಳ ಸವಿ ನೆನಪು ಮರೆಯಲುಂಟೇ...





ಇಂದಿಗೆ ದೇಚವಾಲಯದ ಅರ್ಚಕರಾದ
ಶ್ರಿ ರಂಗನಾಥ  ಅವರು ನನ್ನ ಬಾಲ್ಯದ ಸ್ನೇಹಿತ,
ಅವರೊಂದಿಗೆ ನಾನು ಮತ್ತು ನನ್ನ ಶ್ರೀಮತಿ.








ನರಸಿಂಹಸ್ವಾಮಿ ದೇವಾಲಯದ ಈ ಹೊರ ಆವರಣದಲ್ಲಿ ಆರ್.ಎಸ್.ಎಸ್.ಶಾಖೆ ನಡೆಯುತ್ತಿತ್ತು. ನಾನು ಪ್ರತಿನಿತ್ಯ ಸಂಜೆ ಇಲ್ಲಿಗೆ ಹಾಜರಾಗುತ್ತಿದ್ದೆ.  ಬಾಲ್ಯಸ್ನೇಹಿತರೆಷ್ಟೋ..ಅವರೊಡನೆ ಕಬ್ಬಡಿ, ಕೋಕೋ ಆಟಗಳು ಮತ್ತು ದೇಶ ಭಕ್ತಿ ಗೀತೆಗಳು, ನಮ್ಮ ನಾಡು ನುಡಿಯ ಬಗ್ಗೆ ಮಾತು ಕತೆ,  ನಮ್ಮ ಸನಾತನ ಹಿಂದೂ ಧರ್ಮ ಸಂಸ್ಕೃತಿಯ ಬಗ್ಗೆ ಚಿಕ್ಕಂದಿನಿಂದಲೆ ನಮಗೆ ದೊರೆಯುತ್ತಿದ್ದ ತಿಳುವಳಿಕೆ ಹಾಗೂ ನಮ್ಮ ಸಂಸ್ಕೃತಿ ಪರಂಪರೆಯ ಅಡಿಪಾಯ  ಶ್ಲಾಘನೀಯವೇ.  ಅಲ್ಲಿ ಯಾವೊಂದು ರಾಜಕೀಯದ ಚರ್ಚೆಗಳಿರುತ್ತಿರಲಿಲ್ಲ. ಅದು ಅಲ್ಲಿ ಅನಪೇಕ್ಷಿತವಾಗಿತ್ತು. ನಾನು   ಎಸ್ಸೆಸ್ಸೆಲ್ ಸಿ ಮುಗಿಸಿದ ಬಳಿಕ ನಮ್ಮ ಕುಟುಂಬ ಭದ್ರಾವತಿ ತೊರೆದು ಶಿವಮೊಗ್ಗಾಕ್ಕೆ ಬರಬೇಕಾಯಿತು. ಆನಂತರ, ಆರ್ ಎಸ್ ಎಸ್ ನಿಂದ ದೂರವೇ ಉಳಿದುಬಿಟ್ಟೆನಾದರೂ, ಒಟ್ಟಿನಲ್ಲಿ ಆರ್ ಎಸ್ ಎಸ್ ನಮ್ಮ ಹರೆಯದ ದಿನಗಳಲ್ಲೇ ನಮಗೆ ನೀಡಿದ ಸಾಂಸ್ಕೃತಿಕ ವ್ಯಕ್ತಿತ್ವ ವಿಕಾಸವನ್ನು ಎಂದಿಗೂ ಮರೆಯುವಂತಿಲ್ಲ.
 ಪ್ರೌಢಶಾಲೆಯಲ್ಲಿ ನನ್ನ ಮೇಷ್ಟ್ರೂ ಮಂಜಪ್ಪನವರು. ಇದೀಗ 80 ರ ಹರೆಯದ ಜ್ಞಾನವೃದ್ಧರು. ಅಂದಿನ ಕಾಲಕ್ಕೆ ಅವರು ಒಬ್ಬ ಆರ್.ಎಸ್.ಎಸ್‌.ನ ಕಟ್ಟಾ ಸಯಂಸೇವಕರು.






ನರಸಿಂಹ ಸ್ವಾಮಿ ದೇವಾಲಯದ ಮುಂಭಾಗದ  ಪ್ರಾಂಗಣದಲ್ಲೇ ಪ್ರತಿ ದಿನ ಸಂಜೆ ಸಂಘ
ನಡೆಯುತ್ತಿತ್ತು. ನನಗಂತು ಬಾಲ್ಯದ ದಿನಗಳಿಗಷ್ಟೇ ಸಂಘದ ಒಡನಾಟ ಮುಗಿದಿತ್ತು.

ನನ್ನ ಜೀವನ ಚಿತ್ರಗಳು-ಮಿಡ್ಲ್ ಸ್ಕೂಲ್ ನಲ್ಲಿದ್ದಾಗ...

ನಾನು ಹುಟ್ಟಿದ್ದು ದಾವಣಗೆರೆಯಾದರೂ, ನನ್ನ ಬಾಲ್ಯವೆಲ್ಲ ಕಳೆದದ್ದು ಶಿವಮೊಗ್ಗಾ ಜಿಲ್ಲೆಯ ತಾಲ್ಲೂಕು ಕೇಂದ್ರ ಭದ್ರಾವತಿಯಲ್ಲಿ. ಇತ್ತೀಚೆಗೆ ಭದ್ರಾವತಿ ಹಳೇನಗರಕ್ಕೆ ಭೇಟಿಕೊಟ್ಟಾಗ, ನಾನು 60 ರ ದಶಕದಲ್ಲಿ ಆಟವಾಡಿ ಬೆಳೆದ ಜಾಗಗಳನ್ನೆಲ್ಲ ನೋಡಿಕೊಂಡು ಬರಬೇಕೆನಿಸಿತ್ತು.  ಕೈಯಲ್ಲಿ ಕ್ಯಾಮೆರಾ ಇತ್ತು. ಬಾಲ್ಯದ ಆ ಸವಿನೆನಪಿನ ಕೆಲವು ಚಿತ್ರಗಳು ಇಲ್ಲಿವೆ ನೋಡಿ...

1. ಇದು ನಾನು ಮಿಡ್ಲ್ ಸ್ಕೂಲ್ ಐದನೇ ತರಗತಿಯಲ್ಲಿ ಓದುತ್ತಿದ್ದಾಗ ನಾವು ವಾಸಿಸುತ್ತಿದ್ದ ಭದ್ರಾವತಿ, ಹಳೇನಗರ, ಉಪ್ಪಾರ ಬೀದಿಯ ಮನೆ. ನಮ್ಮ ತಂದೆ ಮತ್ತು ತಾಯಿ ಇಬ್ಬರೂ ಪ್ರೈಮರಿ ಶಾಲಾ ಉಪಾಧ್ಯಾಯರಾಗಿದ್ದರು. ಆಗ ನಾವಲ್ಲಿದ್ದ ಬಾಡಿಗೆಯ ಪುಟ್ಟ ನಾಡ ಹೆಂಚಿನ ಮನೆ ಇದು.ಐದು ದಶಕಗಳನಂತರವೂ ಅಂದು ಹೇಗಿತ್ತೋ ಹಾಗೇ ಇರುವುದು ತೀರಾ ಅನಿರೀಕ್ಷಿತವೇ ಆಗಿತ್ತು!
ಇನ್ನೊಂದು ದೊಡ್ಡ ಅಚ್ಚರಿಯೆಂದರೆ ನಾನು ಈ ಫೋಟೋ ತೆಗೆಯುತ್ತಿದ್ದ ಸಂದರ್ಭದಲ್ಲಿ ಸುಮಾರು 10-12 ವರ್ಷದ ಸ್ಕೂಲ್ ಯೂನಿಫಾರಂನಲ್ಲಿದ್ದ ಹುಡುಗನೊಬ್ಬ ಇದೇ ಮನೆಯಿಂದ ಹೋರಗೋಡಿ ಬಂದ. ಪಾಪ! ಮಗುವಿಗೆ ಇವರ್ಯಾರಪ್ಪಾ ನಮ್ಮ ಮನೆ ಫೋಟೋ ತೆಗೆಯುವವರು ? ಎಂದು ಆಶ್ಚರ್ಯ ಗಾಬರಿ ಎರಡೂ ಆಗಿದ್ದಿರಲಿಕ್ಕೂ ಸಾಕು.
ನಾನು ಆ ಹುಡುಗನನ್ನು ಹತ್ತಿರ ಕರೆದು ಹೇಳಿದೆ, "ನಾನು ನಿಮ್ಮ ಮನೆ ಫೋಟೋ ಏಕೆ ತೆಗೆದೆ ಗೊತ್ತೇನು? ನಾನೂ ನಿನ್ನ ಹಾಗೇ ಹುಡುಗನಿದ್ದಾಗ ಇದೇ ಮನೆಯಲ್ಲೇ ಇದ್ದೆ".
"ಹೌದಾ ಅಂಕಲ್" ಎಂದ.
"ಅದರ ಸವಿ ನೆನಪಿಗಾಗಿ ಈ ಫೋಟೋ ಎಂದೆ.  ಅಲ್ಲದೇ, ನಿಮ್ಮ ತಂದೆ ಏನು ಕೆಲಸ ಮಾಡುತ್ತಾರೆ ?" ಕೇಳಿದೆ,
"ಅವರು ಸ್ಕೂಲ್ ಮೇಷ್ಟ್ರು " ಎನ್ನಬೇಕೇ...
ನಮ್ಮ ತಂದೆ ತಾಯಿ ಇಬ್ಬರೂ ಇಲ್ಲೇ ಸ್ಕೂಲ್ ಮೇಷ್ಟ್ರಾಗಿ ವಾಸವಾಗಿದ್ದರು ಎಂದೆ .
ಹುಡುಗ ನಕ್ಕ ಛಂಗನೆ ಜಿಗಿಯುತ್ತ ಮುಂದೆ ಓಡಿದ.