Tuesday, March 05, 2019

ಮಹಾಶಿವರಾತ್ರಿ ವೈಶಿಷ್ಟ್ಯತೆ

ಒಮ್ಮೆ ಬ್ರಹ್ಮನಿಗೂ ವಿಷ್ಣುವಿಗೂ ನಡುವೆ ಚರ್ಚೆ ನಡೆಯಿತು,
ಬ್ರಹ್ಮ ತನ್ನ ಸೃಷ್ಟಿಕಾರ್ಯ ದೊಡ್ಡದೋ
ವಿಷ್ಣು ತನ್ನ ಸ್ಥಿತಿಸಂರಕ್ಷಣೆ ದೊಡ್ಡದೋ ಎಂಬುದಾಗಿ.
ಆಗ ಮಧ್ಯೆ ಪ್ರವೇಶಿಸಿದ ಶಿವನು ಯ್ಯೋಮ ಭೂಮಿ ಮೀರಿದ ಎತ್ತರಕ್ಕೆ ತನ್ನ ಲಿಂಗಸ್ವರೂಪೀ ಕಂಭದ ದರ್ಶನ ನೀಡಿ, ಈ ಸ್ಥಂಭದ ಅದಿ ಅಂತ್ಯ ಎಲ್ಲಿದೆ? ಹುಡುಕುವಿರಾ? ಎಂದನಂತೆ.
ಅರ್ಥವಾಯಿತೇ? ಸೃಷ್ಟಿ - ಸ್ಥಿತಿ ಕಾರ್ಯ ಇವೆರಡೂ  ನಡೆಯುತ್ತಲೇ ಇರುತ್ತದೆ. ನಿತ್ಯ ನಿರಂತರ ಗೋಚರವೂ ಅಗೋಚರವೂ ಆಗಿರುತ್ತವೆ; ಸೃಷ್ಟಿಗೂ ಸ್ಥಿತಿಗೂ ಆದಿ - ಅಂತ್ಯ ಇಲ್ಲ  ಎಂಬ ಅಖಂಡ ಸತ್ಯವನ್ನು ಶಿವ ನಿರೂಪಿಸಿದ ಮಹತ್ವದ ದಿನವೇ ಮಹಾಶಿವರಾತ್ರಿ ಹಬ್ಬವನ್ನಾಗಿ ಹಿಂದೂಗಳೆಲ್ಲರೂ ಆಚರಿಸುತ್ತೇವೆ. ಪರಂಪರಾಗತ ಶಿವಾರಾಧನೆ ಮಾಡವ ಜನಾಂಗದವರಿಗೆ ಇದು ವಿಶೇಷ   ಹಬ್ಬವೆನಿಸಿದೆಯಷ್ಟೇ.
ಹಿಂದೂಗಳು ಶಿವ ಹೆಚ್ಚೋ ವಿಷ್ಣು ಹೆಚ್ಚೋ ಎಂದು ವೃಥಾ ವಾಗ್ವಾದ ಮಾಡುವರೇಕೆ?
ಆದ್ದರಿಂದ, ಶಿವನವನು ಆದಿ ಅಂತ್ಯವಿಲ್ಲದ
ಸತ್ಯಸ್ವರೂಪಿಯಾಗಿ ಲಯಕ್ಕೆ ಕಾರಣನಾಗವನು.
ವಿಷ್ಣು ಆದಿ ಅಂತ್ಯವಿಲ್ಲದ ಸತ್ವಸ್ವರೂಪಿಯಾಗಿ
ಸ್ಥಿತಿ ಸಂರಕ್ಷನಾಗಿರುವನು.
ಬ್ರಹ್ಮನ ಸೃಷ್ಟಿ, ವಿಷ್ಣುವಿನ ಸ್ಥಿತಿ ರಕ್ಷಣೆ ಎಂಬುದು ನಭೋ ಮಂಡಲದಲ್ಲಿ ನಿತ್ಯನಿರಂತರ ನಡೆಯುವುದು ಎಂಬುದರ ಸಂಕೇತವಾಗಿ
ವಿಷ್ಣುವಿನ ನಾಭಿಯಲ್ಲರಳಿದ ಕಮಲದಲ್ಲಿ ಬ್ರಹ್ಮ ಉಪಸ್ಥಿತನಾಗಿರುವನು.
ಇದೆಲ್ಲವೂ  ಸನಾತನ ಹಿಂದೂಧರ್ಮದಲ್ಲಿ
ವೈವಿಧ್ಯಮಯವಾಗಿದೆ;  ಅರ್ಥಪೂರ್ಣವಾಗಿದೆ.
ನಮ್ಮ ಆದಿ ಋಷಿ ಮಹರ್ಷಿಗಳ ದೂರ ದೃಷ್ಟಿ ದಿವ್ಯ ದೃಷ್ಟಿ ಅಮೋಘವಾದದ್ದು.

ಸತ್ಯಬೇರೆಯಲ್ಲ ಸತ್ವ ಬೇರೆಯಲ್ಲ,
ಸೃಷ್ಟಿ ಸ್ಥಿತಿ ಇಲ್ಲದೇ ಜೀವ ಜಗತ್ತು ಇಲ್ಲ
ಪ್ರಪಂಚದಲ್ಲಿ ದೈವಾರಾಧನೆಗಳೆಂಬುದಿಲ್ಲ.
ಅಂತೆಯೆ
ಶಿವೋಶ್ಚ ಹೃದಯಂ ವಿಷ್ಣು
ವಿಷ್ಣೋಶ್ಚ ಹೃದಯಂ ಶಿವ |
ಶಿವ ವಿಷ್ಣೋಶ್ಚ ಹೃದಯಂ ಬ್ರಹ್ಮ ||
ಎನ್ನುತ್ತದೆ ವೆದಾಂತ.

ಶಿವರಾತ್ರಿಯ ಮತ್ತೊಂದು ವಿಶೆಷವೆಂದರೆ, ಶಿವನು ಪಾರ್ವತಿ ಹಿಮವಂತನ ಮಗಳಾದ ಗಿರಿಜೆಯನ್ನು ಅಂದರೆ ಪಾರ್ವತಿ ದೇವಿಯನ್ನು ವಿವಹವಾಗಿದ್ದು ಶಿವರಾತ್ರಿಯ ದಿನವೇ.. ಪಾರ್ವತಿ ದೇವಿಯು ಶಿವರಾತ್ರಿಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿ.. ಶಿವನ ಜಪ ಮಾಡಿ ಶಿವನನ್ನು ವಲಿಸಿಕೊಂಡು ವಿವಾಹಳಾದಳು...  ಹೀಗೆ ಹಿಂದೂ ಪುರಾಣಗಳಲ್ಲಿ ಶಿವರಾತ್ರಿಗೆ ಮಹತ್ವದ ಹಿನ್ನೆಲೆ ಇದೆ..

ಮಹಾ ಶಿವರಾತ್ರಿ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚಿ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ. ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ,೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ.

ಮೊದಲನೆಯ ಆಯಾಮದಲ್ಲಿ ಹಾಲು, ಎರಡನೆಯ ಆಯಾಮದಲ್ಲಿ ಮೊಸರು, ಮೂರನೆಯ ಆಯಾಮದಲ್ಲಿ ತುಪ್ಪ ಹಾಗೂ ನಾಲ್ಕನೆಯ ಆಯಾಮದಲ್ಲಿ ಜೇನುತುಪ್ಪಗಳಿಂದ ಶಿವನಿಗೆ ಅಭಿಷೇಕ ಮಾಡುವ ಪದ್ಧತಿಯೂ
ಕೆಲವೆಡೆ ಇದೆ.

ಶಿವರಾತ್ರಿ , ಜಾಗರಣೆ ವೈಶಿಷ್ಟ್ಯ...
ಒಂದು ಶಿವರಾತ್ರಿ ವ್ರತವನ್ನು ಆಚರಿಸಿದರೆ, ಸಾವಿರ ಏಕಾದಶಿ  ವ್ರತಗಳು ಆಚರಿಸಿದಷ್ಟು ಫಲಗಳು ಹಾಗೂ ಕಾಶಿಯಲ್ಲಿ ಮುಕ್ತಿ   ಪಡೆದ ಪುಣ್ಯ ಫಲಗಳು ಸಿಗುತ್ತದೆಂದು ಶಿವ ಪುರಾಣದಲ್ಲಿ  ಹೇಳಲಾಗಿದೆ.

ಶಿವರಾತ್ರಿಯಂದು ಮುಕ್ಕಣ್ಣನನ್ನು ಪೂಜಿಸಿ ಜಾಗರಣೆ  ಮಾಡುವುದಕ್ಕೂ ಅರ್ಥವಿದೆ. ಮಧ್ಯರಾತ್ರಿಯಲ್ಲಿ ಶಿವನಿಗೂ  ಪಾರ್ವತಿಗೂ ಕಲ್ಯಾಣವಾಯಿತು. ಈ ವಿವಾಹಕ್ಕೆ ಮೂರು  ಲೋಕಗಳು ಅಂದು ಜಾಗರಣೆ  ಮಾಡಿರುತ್ತವೆ. ಈ ಕಾರಣದಿಂದ   ಅಂದು ನಿದ್ರೆ ಮಾಡದೆ ಶಿವರಾತ್ರಿ ಜಾಗರಣೆ ಮಾಡಬೇಕೆಂದು  ಹೇಳಲಾಗುತ್ತದೆ. ಇದಲ್ಲದೆ, ವರ್ಷಕಾಲ ನಮ್ಮನ್ನು ಕಾಯುವ  ಶಿವನಿಗೆ ಒಂದು ದಿನವಾದರೂ ಆತನನ್ನು ನಾವು  ಕಾಯಬೇಕು.  ಶಿವರಾತ್ರಿಯಂದು ಶಿವನು ಭಕ್ತರನ್ನು ಹರಸುವುದಕ್ಕಾಗಿ ಕೈಲಾಸ  ಲೋಕದಿಂದ ಭೂಲೋಕಕ್ಕೆ ಬರುವುದರಿಂದ ಆತನನ್ನು ಭಕ್ತಿ  ಭಾವದಿಂದ, ಹೃದಯಪೂರ್ವಕವಾಗಿ ಸ್ವಾಗತಿಸಬೇಕಂತಲೂ   ಹೇಳಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಶಿವರಾತ್ರಿ ದಿನದಂದು ಜಾಗರಣೆ  ಮಾಡುತ್ತೇನೆಂಬುದು ಫ್ಯಾಶನ್ ಆಗಿಬಿಟ್ಟಂತಿದೆ. ಇಂದು  ಜಾಗರಣೆ ಮಾಡುವವರ ಸಂಖ್ಯೆಯೇನೋ ಹೆಚ್ಚಾಗಿದೆ. ಆದರೆ,  ಜಾಗರಣೆ ಎಂಬ ಹೆಸರಿನಲ್ಲಿ ಮೋಜು  ಹಾಗೂ ಮಸ್ತಿಗಳೇ  ಹೆಚ್ಚಾಗಿ ಹೋಗಿದೆ. ಶಿವರಾತ್ರಿ ಜಾಗರಣೆ ಎಂದರೆ ಮೋಜು  ಮಸ್ತಿಗಳನ್ನು ಮಾಡುವ ಆಚರಣೆಯಲ್ಲ. ಶಿವರಾತ್ರಿ  ಜಾಗರಣೆಯನ್ನು ಶಿವನ ಸತ್ಯ ಸ್ವರೂಪವನ್ನು ಲಯದ ಮಿಥ್ಯೆಯನ್ನೂ ಅರ್ಥಮಾಡಿಕೊಂಡು ಅವನ ಪ್ರಾರ್ಥನೆ ಭಜನೆ ಹಾಗೂ ಧ್ಯಾನದ ಮುಖಾಂತರ  ಮಾಡಿದರೇನೆ ಶ್ರೇಯಸ್ಕರ.

No comments: